ಶರಣಬಸವ ರೆಸಿಡೆನ್ಸಿ ಶಾಲೆಯಲ್ಲಿ ಅಂತರಿಕ್ಷಯಾನ ಜಾಗೃತಿ ಕಾರ್ಯಾಗಾರ ನಾಳೆಯಿಂದ; ಅನಿಲಕುಮಾರ್ ಪಾಟೀಲ್
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಕಲಬುರಗಿಯ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಂಚಾಲಿತದ ನಗರದ ಶರಣಬಸವ ರೆಸಿಡೆನ್ಸಿ ಶಾಲೆಯಲ್ಲಿ ನಾಳೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರೋಸ್ಪೇಸ್ ಮತ್ತು ಡಿಫೆನ್ಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಅಕಾಡೆಮಿಕ್ ನಿರ್ದೇಶಕ ಅನಿಲಕುಮಾರ್ ಪಾಟೀಲ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಪ್ಪ ನಿಷ್ಠಿ ಎಂಜನಿಯರಿಂಗ್ ಕಾಲೇಜು, ಬಸವರಾಜಪ್ಪ ಅಪ್ಪ ಪದವಿ ವಾಣಿಜ್ಯ ಕಾಲೇಜು, ಶರಣಬಸವ ಸ್ವತಂತ್ರ ಪಪೂ ವಿಜ್ಞಾನ ಮತ್ತು ವಾಣಿಜ್ಯ ಮಹಾ ವಿದ್ಯಾಲಯ ಮತ್ತು ಶರಣಬಸವ ವಸತಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಬೆಳಗ್ಗೆ 10.30 ಗಂಟೆಗೆ ಅಂತರಿಕ್ಷೆ ಕುರಿತಾದ ಫಿಯುಚರ್ ಫ್ಲಾರ್ಸ್ ವಿಷಯದ ಮೇಲೆ ಬೆಂಗಳೂರಿನ ಬಾಹ್ಯಾಕಾಶ ಎಂಜನಿಯರ್ ಪ್ರದೀಪ್ ಸಾವಳಕರ್ ಅವರಿಂದ ಒಂದು ದಿನದ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ವೀರಪ್ಪ ನಿಷ್ಠಿ ಎಂಜನಿಯರ್ ಕಾಲೇಜಿನ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ.ಶಾಂತಲಾ ಎನ್.ನಿಷ್ಠಿ ಅಧ್ಯಕ್ಷತೆ ವಹಿಸುವರು. ಜಂಟಿ ಕಾರ್ಯದರ್ಶಿ ದೊಡಪ್ಪ ಎಸ್.ನಿಷ್ಠಿ ಸಂಚಾಲಕರಾಗಿರುತ್ತಾರೆ. ಈ ಕಾರ್ಯಾಗಾರವನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಥಮ ಬಾರಿಗೆ ಪ್ರಸ್ತುತಪಡಿಸಲಾಗುತ್ತಿದೆ. ಸುರಪುರ ಸುತ್ತಮುತ್ತಲಿನ ೨೦ ಕ್ಕೂ ಹೆಚ್ಚು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಾರ್ಯಾಗಾರದಲ್ಲಿ ಭಾಗವಹಿಸಿ ಸದಪಯೋಗಪಡಿಸಿಕೊಳ್ಳಲು ತಿಳಿಸಲಾಗಿದೆ ಎಂದರು.
ಇಂದು ತಂತ್ರಜ್ಞಾನದ ಮಾಹಿತಿ ಅತ್ಯವಶ್ಯಕವಾಗಿದೆ. ನಮ್ಮ ಹಾಗೂ ಈ ಭಾಗದ ಇತರೆ ವಿದ್ಯಾರ್ಥಿಗಳು ಸಹ ಅಂತರಿಕ್ಷದ ಬಗ್ಗೆ ತಿಳಿದುಕೊಳ್ಳಬೇಕು ಎಂಬುದು ಸಂಸ್ಥೆಯವರ ಉದ್ದೇಶವಾಗಿದೆ. ಏರೋಸ್ಪೇಸ್ ಎಂಜನಿಯರ್ ಪ್ರದೀಪ್ ಸಾವಳಕರ್ ಅವರು ಇಸ್ರೋದಲ್ಲಿರುವ ಕೆಲ ವಿಜ್ಞಾನಗಳ ಜತೆಗೂಡಿ ಕಾರ್ಯನಿರ್ವಹಿಸಿರುತ್ತಾರೆ. ಅಂತº ಎಂಜನಿಯರ್ ನಮ್ಮ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಅಂತರಿಕ್ಷದ ಬಗ್ಗೆ ಮಾಹಿತಿ ನೀಡುತ್ತಿರುವುದು ಸಂತೋಷದ ಸಂಗತಿ. ಕಾರ್ಯಾಗಾರದಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ವಸ್ತು ಪ್ರದರ್ಶನ ಸಹ ಏರ್ಪಡಿಸಲಾಗಿದೆ. ಈ ಕಾರ್ಯಾಗಾರ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂದರು. ಶರಣಬಸವ ಪಬ್ಲಿಕ್ ಶಾಲೆಯ ಮುಖ್ಯ ಗುರು ರೇವಪ್ಪ ಪಾಟೀಲ್, ಶಿಕ್ಷಕ ಸಿದ್ರಾಮ್ ಹಾವನೂರ ಇದ್ದರು.



