ವೀರಯೋಧ ಗುದಡಯ್ಯ ಸ್ವಾಮಿಯವರಿಗೆ ಜಿಲ್ಲಾಡಳಿತದಿಂದ ಗೌರವ ಸನ್ಮಾನ


ಸುರಪುರ ಟೈಮ್ಸ್ ವಾರ್ತೆ

ಯಾದಗಿರಿ: ಜಿಲ್ಲೆಯ ಶಹಾಪುರ  ಪಟ್ಟಣದ ವೀರಯೋಧರಾದ ಗುದಡಯ್ಯ ಸ್ವಾಮಿಯವರು 1971ರಲ್ಲಿ ಭಾರತ–ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಶೌರ್ಯದಿಂದ ಹೋರಾಡಿ ವಿಜಯಶಾಲಿಗಳಾದ ಹಿನ್ನೆಲೆಯಲ್ಲಿ, ಇಂದು ಯಾದಗಿರಿ ಜಿಲ್ಲಾಧಿಕಾರಿಗಳಿಂದ ಗೌರವ ಸನ್ಮಾನ ಸ್ವೀಕರಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸರಳ ಹಾಗೂ ಭಾವನಾತ್ಮಕ ಸಮಾರಂಭದಲ್ಲಿ ಗುದಡಯ್ಯ ಸ್ವಾಮಿಯವರ ದೇಶಸೇವೆಯನ್ನು ಸ್ಮರಿಸಿ, ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, “ದೇಶದ ರಕ್ಷಣೆಗೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ವೀರಯೋಧರು ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದಾರೆ. ಅವರ ತ್ಯಾಗ ಮತ್ತು ಶೌರ್ಯವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗುದಡಯ್ಯ ಸ್ವಾಮಿಯವರು, ದೇಶಸೇವೆಯ ಅವಕಾಶ ದೊರೆತಿದ್ದು ತಮ್ಮ ಜೀವನದ ಹೆಮ್ಮೆ ಎಂದು ತಿಳಿಸಿ, ಯುವಜನರು ರಾಷ್ಟ್ರಭಕ್ತಿಯನ್ನು ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಯುದ್ಧ ವೀರರ ಸಂಘದ ಸದಸ್ಯರು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ವೀರಯೋಧನಿಗೆ ಗೌರವ ಸಲ್ಲಿಸಿದ ಜಿಲ್ಲಾಡಳಿತದ ಕ್ರಮಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.

Leave a Reply

Your email address will not be published. Required fields are marked *

error: Content is protected !!