ರೈತ ಸಂಘದ ಅಧ್ಯಕ್ಷ ಮಲ್ಲಣ್ಣ ಸಾಹುಕಾರ ಜಾಲಿಬೆಂಚಿ ಪದಗ್ರಹಣ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ | ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಆರೋಪ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ರಾಜ್ಯದಲ್ಲಿ ವಿವಿಧ ಮೂಲಗಳ ಮೂಲಕ ಸರಕಾರಕ್ಕೆ ಅತಿ ಹೆಚ್ಚು ಕರ ತುಂಬುವವರೆ ಅನ್ನದಾತರು. ಶೇ.74 ರಷ್ಟು ಟೆಕ್ಸ್ ಕಟ್ಟುತ್ತಾರೆ. ಆದರೆ, ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ರೈತ ಕುಲದ ಮೇಲೆ ನಿರಂತರವಾಗಿ ಅನ್ಯಾಯ ಮುಂದುವರೆದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಹೇಳಿದರು.
ತಾಲೂಕಿನ ಲಕ್ಷ್ಮೀಪುರ ಗ್ರಾಮದ ಶ್ರೀಗಿರಿ ಸಂಸ್ಥಾನ ಮಠದ ಆವರಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ತಾಲೂಕು ಘಟಕದ ನೂತನ ಅಧ್ಯಕ್ಷ ಮಲ್ಲಣ್ಣ ಸಾಹುಕಾರ ಜಾಲಿಬೆಂಚಿ ಆವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರ ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡಿ ಎಂದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸ್ಪಂದಿಸುತ್ತಿಲ್ಲ. ನಿರ್ಲಕ್ಷö್ಯ ಧೋರಣೆ ಮುಂದುವರಿಸಿವೆ ಎಂದು ದೂರಿದರು.
ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಲ್ಲಿ ಏಳು ನದಿಗಳು ತುಂಬಿ ಹರಿದು, ಜಲಾಶಯಗಳು ಭರ್ತಿಯಾಗಿ ಆಂಧ್ರ ಸೇರುತ್ತಿವೆ. ಕ್ರಸ್ಟ್ ಗೇಟ್‌ಗಳು ಕಿತ್ತು ಹೋಗಿವೆ. ಆಲಮಟ್ಟಿ ಜಲಾಶಯ ಎತ್ತರಿಸಲು ರಾಜ್ಯ ಸರಕಾರ ಅನುದಾನ ನೀಡಲು ಸಿದ್ಧವಿಲ್ಲ. ಆಲಮಟ್ಟಿ ಜಲಾಶಯ ಎತ್ತರಿಸಿದರೆ 40 ಲಕ್ಷ ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ. ಆಲಿಮಟ್ಟಿ ಜಲಾಶಯ ಎತ್ತರ ಮತ್ತು ಮೂರನೇ ಹಂತದ ಕಾಮಗಾರಿ ಹೋರಾಟಕ್ಕೆ ಎಲ್ಲರೂ ಸಜ್ಜಾಗಬೇಕು. ಬೆಂಗಳೂರಿಗೆ ಹೋಗಿ ಸರಕಾರವನ್ನು ಬಡಿದೆಬ್ಬಿಸುವ ಕೆಲಸ ಮಾಡಬೇಕಾದೆ. ಆಗ ಸರಕಾರ ಗಮನಿಸುತ್ತದೆ ಇಲ್ಲವಾದಲ್ಲಿ ನಮ್ಮ ಭಾಗಕ್ಕೆ ಅನುದಾನ ಬಿಡುಗಡೆ ಮಾಡುವುದಿಲ್ಲ. ಈ ಭಾಗದ ನೀರಾವರಿ ಯೋಜನೆಗಳು ಸಂಪೂರ್ಣವಾಗಿ ಹಾಳಾಗಿ ಹೋಗುತ್ತವೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣಗೌಡ ಹಗರಟಗಿ ಮಾತನಾಡಿ, ಸಂಘದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ರಾಜ್ಯ 31 ಜಿಲ್ಲೆಗಳಲ್ಲಿ ಸಂಘದ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆದಿದೆ. ಯಾದಗಿರಿ ಜಿಲ್ಲೆಯಲ್ಲಿ ಸಂಘ ಬಲಿಷ್ಠವಾಗಿದೆ. ಎಲ್ಲಾ ತಾಲೂಕು, ಹೋಬಳಿ ಶಾಖೆಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಗುವುದು. ರೈತರಿಗೆ ಸದಾ ಬೆನ್ನೆಲುಬವಾಗಿ ಸಂಘ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪುರ ಮಾತನಾಡಿ, ರೈತರು ದೇಶದ ಬೆನ್ನೆಲುಬು. ರೈತರ ಹೆಸರು ಮೇಲೆ ಇಂದು ಸರಕಾರಗಳು ಬರುತ್ತವೆ ಆದರೆ ಅವರ ಗೋಳು ಕೇಳುವುದಿಲ್ಲ. ನೂತನ ಅಧ್ಯಕ್ಷ ಮಲ್ಲಣ್ಣ ಸಾಹುಕಾರ ಸೇವೆ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅಪಾರವಾಗಿದೆ ಅವರು ಅನೇಕರನ್ನು ಬೆಳೆಸುವ ಕೆಲಸ ಮಾಡಿದ್ದಾರೆ. ಈಗ ರೈತ ಸಂಘದ ತಾಲೂಕಿನ ಸಾರಥ್ಯ ವಹಿಸಿರುವುದು ಸಂತೋಷದ ಸಂಗತಿ. ಅವರು ರೈತರ ಪರವಾಗಿ ಧ್ವನಿ ಎತ್ತಲಿದ್ದಾರೆ ಎಂದರು. ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಪ್ರಶಾಂತಗೌಡ ಪಾಟೀಲ್ ಮಾತನಾಡಿದರು. ಶ್ರೀ ಮಠದ ಪೀಠಾಧಿಪತಿ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಸಂದೇಶ ನೀಡಿದರು. ರೈತ ಸಂಘದ ತಾಲೂಕು ಅಧ್ಯಕ್ಷರಾಗಿ ಮಲ್ಲಣ್ಣ ಸಾಹುಕಾರ ಜಾಲಿಬೆಂಚಿ ಅಧಿಕಾರ ಸ್ವೀಕರಿಸಿದರು. ಅಮರಯ್ಯಸ್ವಾಮಿ ಜಾಲಿಬೆಂಚಿ, ಗುರುನಾಥರೆಡ್ಡಿ ಹದನೂರ, ಮುತ್ತುಗೌಡ ಪರಸನಹಳ್ಳಿ, ಶಿವಶರಣಪ್ಪ ಸಾಹುಕಾರ, ದೇವಿಂದ್ರಪ್ಪ ಕೊಲಕರ, ನಾಗರೆಡ್ಡಿ, ಮಲ್ಲನಗೌಡ ಗುಂಡಲಗೇರಿ, ಶಿವಶಂಕರ ನಗನೂರ, ರಮೇಶ ಸಾಹು ಬೋನಾಳ. ಸಂಗಣ್ಣ ಬಾಗೇವಾಡಿ, ವೆಂಕಟೇಶ, ಅಯ್ಯಪ್ಪ, ಮಲ್ಲು ಬಡಿಗೇರ, ವಿರೇಶ, ನಾಗಪ್ಪ ಬಳಿ, ಅಪ್ಪುಗೌಡ ಸೇರಿ ವಿವಿಧ ಗ್ರಾಮಗಳ ರೈತ ಮುಖಂಡರು, ರೈತರು ಇದ್ದರು.

Leave a Reply

Your email address will not be published. Required fields are marked *

error: Content is protected !!