ಶೂರರ ನಾಡು  ಸುರಪುರದಲ್ಲಿ ಜನಾಕರ್ಷಿಸಿದ RSS ಭವ್ಯ ಪಥಸಂಚಲನ

ಸುರಪುರ ಟೈಮ್ಸ್ ವಾರ್ತೆ

ಸುರಪುರ : ವಿಜಯದಶಮಿ ಹಾಗೂ ರಾಷ್ಟೀಯ ಸ್ವಯಂ ಸೇವಕ ಸಂಘದ ಶತಾಬ್ಧಿ ವರ್ಷ ಅಂಗವಾಗಿ ರಾಷ್ಟೀಯ ಸ್ವಯಂ ಸೇವಕ ಸಂಘದಿಂದ ನಗರದಲ್ಲಿ ಮಂಗಳವಾರ ಆಕರ್ಷಕ ಮತ್ತು ಭವ್ಯ ಪಥಸಂಚಲನ ಜರುಗಿತು. ನೂರಾರು ಗಣವೇಷಧಾರಿಗಳು ಭಾಗವಹಿಸಿ ದೇಶಭಕ್ತಿ ಮೆರೆದರು.
ನಗರದ ಶ್ರೀ ಪ್ರಭು ಮಹಾ ವಿದ್ಯಾಲಯದ ಮೈದಾನದಿಂದ ಮಧ್ಯಾಹ್ನ 4 ಗಂಟೆಗೆ ಪ್ರಾರಂಭವಾದ ಪಥಸಂಚಲನ ಸಿಎಂಸಿ ಕಚೇರಿ ರಸ್ತೆ, ಮಹಾತ್ಮ ಗಾಂಧೀಜಿ ವೃತ್ತ, ರಾಜ ಬೀದಿ ಮುಖ್ಯ ರಸ್ತೆ, ಕಬಾಡಗೇರಾ, ಈಶ್ವರ ಮಂದಿರ, ಅಗಸಿ, ಜೈನ್ ಮಂದಿರ, ಶೆಟ್ಟಿ ಮೊಹಲ್ಲಾ, ಮೇದಾರ ಗಲ್ಲಿ, ಡೊಣ್ಣಿಗೇರಾ ಮುಖ್ಯ ರಸ್ತೆ, ಶ್ರೀವೇಣುಗೋಪಾಲಸ್ವಾಮಿ ದೇವಸ್ಥಾನ ರಸ್ತೆ, ಹನುಮಾನ ಟಾಕೀಸ್ ರಸ್ತೆ, ಬಸ್ ನಿಲ್ದಾಣ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೋಡುಗರ ಗಮನ ಸೆಳೆಯಿತು. ಸಾರ್ವಜನಿಕರು ಪಥಸಂಚಲನ ಸಾಗುವ ಎರಡು ಬದಿಯಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ನಿಂತು ಗೌರವಪೂರ್ವಕವಾಗಿ ಗಣವೇಷಧಾರಿಗಳ ಮೇಲೆ ಪುಷ್ಪವೃಷ್ಟಿಗೈದರು.
ರಾಷ್ಟೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಡಾ.ಕೇಶವ ಬಲರಾಂ ಹಡಗೇವಾರ ಹಾಗೂ ಮಾಧವ ಸದಾಶಿವ ಗೋಲ್ವಾಲ್ಕರ ಅವರ ಭಾವಚಿತ್ರವಿಟ್ಟು ಅಲಂಕೃತವಾಗಿದ್ದ ರಥ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕೇಸರಿ ಧ್ವಜ, ಆಕರ್ಷಕ ಬ್ಯಾಂಡ್‌ಗಳು ನೋಡುಗರನ್ನು ಆಕರ್ಷಿಸಿತು. ಭಾಗವ ಧ್ವಜ ಹಾಗೂ ಸಂಘದ ಸಂಸ್ಥಾಪಕರ ಭಾವಚಿತ್ರಕ್ಕೆ ಜನರು ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಗಣವೇಷಧಾರಿಗಳ ಮೇಲೆ ಪುಷ್ಪಾಗಳ ಮಳೆಗರೆದು ಭಾರತ ಮಾತಾ ಕೀ ಜೈ ಎಂದು ಜಯಘೋಷ ಮೊಳಗಿಸಿದರು.
ಮಹಾತ್ಮ ಗಾಂಧೀಜಿ ವೃತ ಸೇರಿ ನಗರದ ಪ್ರಮುಖ ವೃತ್ತಗಳಲ್ಲಿ ಕೇಸರ್ ಬಣ್ಣದ ಧ್ವಜ, ಬಟಿಂಗ್ಸ್ಗಳು ರಾರಾಜಿಸುತ್ತಿದ್ದವು. ಆರ್‌ಎಸ್‌ಎಸ್ ಪಂಥಸಂಚಲನದ ಹಿನ್ನೆಲೆಯಲ್ಲಿ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸ್ವಾಭಿಮಾನದ ಪ್ರತೀಕ ಮಹಾರಾಣಾ ಪ್ರತಾಪಸಿಂಗ, ಸಂಸ್ಥಾನದ ವೀರ ಸೇನಾನಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಸೇರಿ ಇನ್ನಿತರ ವೀರರ, ದೇಶಭಕ್ತರ ಸ್ವಾಗತ ಕಮಾನುಗಳು ನೋಡುಗರ ಗಮನಸೆಳೆದಿದ್ದವು. ಎಲ್ಲಡೆ ಸಂಭ್ರಮ ಮನೆ ಮಾಡಿತ್ತು. ಇಂದು ಆರ್‌ಎಸ್‌ಎಸ್‌ನ ಪಥಸಂಚಲನ ಇದೆ. ಆ ಸಂಭ್ರಮ ಕಣ್ಣಾರೆ ಕಾಣಬೇಕು ಎಂದು ಅನೇಕರು ತುದಿಗಾಲಿನಲ್ಲಿ ನಿಂತು ನೋಡಿದರು.
ನಗರಕ್ಕೆ ಬಂದ ಹಳ್ಳಿಯ ಜನರು ಕೂಡ ಭವ್ಯ ಪಥಸಂಚಲನದ ಕಣ್ತುಂಬಿಕೊಂಡರು. ಎಲ್ಲಡೆ ದೇಶಭಕ್ತಿ ಮೊಳಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಮಕ್ಕಳು ಭಾಗವಹಿಸಿ ಪಥ ಸಂಚಲನ ಮೆರಗು ಹೆಚ್ಚಿಸಿದರು. ಹಿರಿಯರು ಹಾಕುತ್ತಿದ್ದ ಹೆಜ್ಜೆ ದೇಶಭಕ್ತಿ ಪುಟಿದೆಳಿಸುತ್ತಿತ್ತು. ಸುಮಾರು ಒಂದು ಗಂಟೆಗಳ ವರೆಗೆ ನಡೆದ ಸಡಗರದ ಪಥಸಂಚಲನಕ್ಕೆ ನಗರವಾಸಿಗಳು ಸಾಕ್ಷಿಯಾದರು. ಒಟ್ಟಾರೆ ಆರ್‌ಎಸ್‌ಎಸ್ ಪಥಸಂಚಲನ ಶ್ರದ್ಧಾ-ಭಕ್ತಿ, ವಿಜೃಂಭಣೆಯೊಂದಿಗೆ ಯಶಸ್ವಿಯಾಗಿ ಜರುಗಿತು.


ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಸಚಿವ ರಾಜುಗೌಡ ಗಣವೇಷಧಾರಿಯಾಗಿ ಕೈಯಲ್ಲಿ ಲಾಠಿ ಹಿಡಿದು ಶಿಸ್ತುಬದ್ಧ ಪಥ ಸಂಚಲನದಲ್ಲಿ ಭಾಗವಹಿಸಿ ಸ್ವಯಂ ಸೇವಕರ ಹುಮ್ಮಸ್ಸು ಹೆಚ್ಚಿಸಿದರು. ಕೆವೈಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ ಸಜ್ಜನ್, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ), ಪ್ರೊ. ವೇಣುಗೋಪಾಲ ನಾಯಕ ಜೇವರ್ಗಿ, ಚಂದ್ರಶೇಖರಗೌಡ ಮಾಗನೂರು, ವೇಣುಮಾಧವ ನಾಯಕ, ರಾಜು ಪುಲ್ಸೆ, ಸಂದೀಪ ಜೋಷಿ, ಆನಂದ ಬಾರಿಗಿಡದ, ಬಸವರಾಜ ಮೇಲಿನಮನಿ ಸೇರಿ ಅನೇಕ ಗಣ್ಯರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ರಂಗಂಪೇಟೆ-ತಿಮ್ಮಾಪುರ, ಸತ್ಯಂಪೇಟೆ, ಕುಂಬಾರಪೇಟೆ ಸೇರಿ ಸುತ್ತಲಿನ ಊರಿನ ಗಣವೇಷಧಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!