ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪರಿಶೀಲಿಸಿದ ಜಿಲ್ಲಾಧಿಕಾರಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದ ಯಾರೂ ಹೊರಗೆ ಉಳಿಯದಂತೆ ಸಮೀಕ್ಷೆದಾರರು ಶ್ರಮಿಸಬೇಕು’ ಎಂದು ಜಿಲ್ಲಾಧಿಕಾರಿ ಭೋಯಾರ್ ಹರ್ಷಲ್ ನಾರಾಯಣರಾವ್ ಸೂಚಿಸಿದರು.
ನಗರದ ಹಸನಾಪುರ ವಾರ್ಡ್ ಅಂಗನವಾಡಿ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿ ಸಮೀಕ್ಷೆ ಕುರಿತು ಪರಿಶೀಲಿಸಿ ಅವರು ಮಾತನಾಡಿದರು.
‘೦-6 ವರ್ಷದ ಒಳಗಿನ ಮಕ್ಕಳು, ಗರ್ಭಿಣಿಯರ, ಬಾಣಂತಿಯರು, ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳು ಸಮೀಕ್ಷೆಯಲ್ಲಿ ನೊಂದಾಯಿತವಾಗಿರುವಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.
‘ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ, ಗರ್ಭಿಣಿಯರ, ಬಾಣಂತಿಯರ, ಫಲಾನುಭವಿಗಳ ದಾಖಲೆ ಇರುತ್ತದೆ. ಪ್ರತಿಯೊಬ್ಬರಿಗೆ ದೂರವಾಣಿ ಕರೆ ಮಾಡಿ ಸಮೀಕ್ಷೆಯಲ್ಲಿ ಪಾಲ್ಗೊಂಡ ಬಗ್ಗೆ ಖಚಿತ ಮಾಡಿಕೊಳ್ಳಬೇಕು’ ಎಂದು ಹೇಳಿದರು.
‘ಜಿಲ್ಲೆಯಲ್ಲಿ ಸಮೀಕ್ಷೆದಾರರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಅ. 18ರ ಒಳಗೆ ಸಮೀಕ್ಷೆ ಮುಗಿಸಲು ಕಾರ್ಯ ಆದೇಶಿಸಿತ್ತು. ಜಿಲ್ಲೆಯಲ್ಲಿ ಸಮೀಕ್ಷೆಯ ಪ್ರತಿಶತ ಗುರಿ ಸಾಧಿಸಲು ಸಹಕರಿಸಬೇಕು’ ಎಂದು ತಿಳಿಸಿದರು.
ತಾಲ್ಲೂಕಿನ ಬಿಜಾಸಪುರ, ಹಸನಾಪುರ, ದೇವಪುರ, ಹೆಬ್ಬಾಳ ಬಿ. ಚನ್ನೂರ ತಾಂಡಾ ಮತ್ತು ಹುಣಸಗಿ ಪಟ್ಟಣದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ತಹಶೀಲ್ದಾರ್ ಎಚ್.ಎ. ಸರಕಾವಸ್, ತಾಲ್ಲೂಕು ಪಂಚಾಯಿತಿ ಇ.ಓ. ಬಸವರಾಜ ಸಜ್ಜನ್, ಸಿಡಿಪಿಓ ಲಾಲಸಾಬ ಪೀರಾಪುರ, ನಗರಸಭೆ ಪೌರಾಯುಕ್ತ ಬಸವರಾಜ ತನಿಖೆದಾರ, ಎಇಇ ಶಾಂತಪ್ಪ ಹೊಸೂರ, ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.







