ಲೋಕ ಕಲ್ಯಾಣಾರ್ಥವಾಗಿ ಭಗವಾನ ಶ್ರೀ ಧನ್ವಂತರಿ ಜಯಂತ್ಯುತ್ಸವ ಅ.27 ಕ್ಕೆ ಆರ್.ಸಿ.ನಾಯಕ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಇಲ್ಲಿಯ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಯಾದಗಿರ ಜಿಲ್ಲಾ ಘಟಕದ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಭಗವಾನ ಶ್ರೀ ಧನ್ವಂತರಿ ಜಯಂತ್ಯುತ್ಸವ ಆಯೋಜಿಸಲಾಗಿದೆ ಎಂದು ಕಕ ಪಾರಂಪರಿಕ ವೈದ್ಯ ಪರಿಷತ್‌ನ ಖಜಾಂಚಿ ರಾಜಾ ಚನ್ನಪ್ಪ ನಾಯಕ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.27, ಸೋಮವಾರ ಬೆಳಗ್ಗೆ 7ಗಂಟೆಗೆ ದೇವಸ್ಥಾನದ ಆವರಣದಲ್ಲಿ ಶ್ರೀ ವೇಣುಗೋಪಾಲಸ್ವಾಮಿಗೆ ಅಭಿಷೇಕ, ಮಹಾ ಮಂಗಳಾರತಿ ಮತ್ತು ಧನ್ವಂತರಿ ಹೋಮ ಜರುಗಲಿದೆ. ನಂತರ 11 ಗಂಟೆಗೆ ಭಗವಾನ ಶ್ರೀ ಧನ್ವಂತರಿ ಭಾವಚಿತ್ರದ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಶ್ರದ್ಧಾ-ಭಕ್ತಿಯೊಂದಿಗೆ ಅದ್ಧೂರಿಯಾಗಿ ನಡೆಯಲಿದೆ ಎಂದರು.
ಮೆರವಣಿಗೆ ಬಳಿಕ ದೇವಸ್ಥಾನದ ಆವರಣದಲ್ಲಿ ಜಯಂತ್ಯುತ್ಸವ ಏರ್ಪಡಿಸಲಾಗಿದೆ. ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಮತ್ತು ಶಾಸಕ ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸುವರು. ಕನಕಗಿರಿ ಹುಲಿ ಹೈದರ ಸಂಸ್ಥಾನದ ರಾಜಾ ಸುಭಾಶ್ಚಂದ್ರ ನಾಯಕ ಅವರು ಧನ್ವಂತರಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡುವರು. ಪ್ರಭುಲಿಂಗ ಸ್ವಾಮೀಜಿ, ಗುರುಶಾಂತಮೂರ್ತಿ ಶಿವಾಚಾರ್ಯ, ಬಸವ ಪ್ರಸಾದ ಸ್ವಾಮೀಜಿ, ಜಯ ಗುರುದೇವ ಸ್ವಾಮೀಜಿ ಸಾನ್ನಿಧ್ಯ. ಕಕ ಪಾರಂಪರಿಕ ವೈದ್ಯ ಪರಿಷತ್ ರಾಜ್ಯಾಧ್ಯಕ್ಷ ಆನಂದ ಹೇರೂರ ಅಧ್ಯಕ್ಷತೆ, ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ ಗೌರವ ಉಪಸ್ಥಿತಿ. ಖಜಾಂಚಿ ರಾಜಾ ಚನ್ನಪ್ಪ ನಾಯಕ ನೇತೃತ್ವ ವಹಿಸಲ್ಲಿದ್ದಾರೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಹೀನಾ ಕೌಸರ್ ಶಕೀಲ್ ಅಹ್ಮದ್, ಪ್ರಮುಖರಾದ ರಾಜಾ ಮುಕುಂದ ನಾಯಕ, ಡಾ.ಆರ್.ವಿ.ನಾಯಕ, ಜಯಪ್ರಕಾಶ ನಾರಾಯಣ, ಡಾ.ಶಫೀಕ್ ಅಹ್ಮದ್, ಪಿಐ ಉಮೇಶ ನಾಯಕ, ನರಸಿಂಹ ವೈದ್ಯ ಮುಖ್ಯ ಅತಿಥಿಗಳು. ಸಿದ್ದಲಿಂಗಸ್ವಾಮಿ ಋಷಿಗುಂಡ ಸೇರಿ ಅನೇಕರು ಗೌರವ ಆಹ್ವಾನಿತರಾಗಿರುತ್ತಾರೆ ಎಂದು ಹೇಳಿದರು. ಪರಿಷತ್‌ನ ಜಿಲ್ಲಾಧ್ಯಕ್ಷ ಮಕ್ತುಮ ಪಟೇಲ್ ವಜ್ಜಲ್, ಮಾರುತಿ ಶಾಸ್ತಿç ಮಾಳನೂರು, ರಾಜಾ ಉಡಚಪ್ಪ ನಾಯಕ ಸುದ್ದಿಗೋಷ್ಠಿಯಲ್ಲಿದ್ದರು.

ಭವ್ಯ ಮೆರವಣಿಗೆ
ನಗರದಲ್ಲಿ ಪ್ರಥಮ ಬಾರಿಗೆ ಭಗವಾನ ಶ್ರೀ ಧನ್ವಂತರಿ ಜಯಂತ್ಯುತ್ಸವದ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ. ಮಾರುಕಟ್ಟೆ ಪ್ರದೇಶ, ರಾಜ ಬೀದಿ ಸೇರಿ ಗಾಂಧೀಜಿ ವೃತ್ತದ ಮಾರ್ಗದಲ್ಲಿ ಮೆರವಣಿಗೆ ಸಾಗಲಿದೆ. ಧನ್ವಂತರಿ ಹೋಮದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬಹುದು. ಜಯಂತ್ಯುತ್ಸವದಲ್ಲಿ ಭಾಗವಹಿಸಲು ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್‌ನ ಸುಮಾರು ೩೦೦ಕ್ಕೂ ಹೆಚ್ಚು ವೈದ್ಯರು ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುತ್ತಿದ್ದಾರೆ. ಉಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಾರೆ ಜಯಂತ್ಯುತ್ಸವದ ಯಶಸ್ವಿಗೆ ಶ್ರಮವಹಿಸಲಾಗುತ್ತಿದೆ ಎಂದು ರಾಜಾ ಚನ್ನಪ್ಪ ನಾಯಕ ನುಡಿದರು.


ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಧನ್ವಂತರಿ ಜಯಂತಿಯನ್ನು ಆಚರಿಸಲಾಗುತ್ತದೆ. ಸಕಲ ಆರೋಗ್ಯವನ್ನು ಕರುಣಿಸುವ ಧನ್ವಂತರಿ ದೇವರನ್ನು ಪೂಜಿಸಲಾಗುತ್ತದೆ. ವಿಷ್ಣುವಿನ ಅವತಾರ, ದೇವತೆಗಳ ವೈದ್ಯ, ಆಯುರ್ವೇದದ ಹರಿಕಾರ ಧನ್ವಂತರಿ ದೇವರಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. ಹಿಂದೂ ಸಂಪ್ರದಾಯದಲ್ಲಿ ಆಯುರಾರೋಗ್ಯ ಬಯಸುವವರು ಧನ್ವಂತರಿಯ ಕುರಿತು ಪ್ರಾರ್ಥನೆ ಮಾಡುವುದು ಸಾಮಾನ್ಯ. ಧನ್ವಂತರಿ ದೇವರ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಜಯಂತಿಯಲ್ಲಿ ಪ್ರಾರ್ಥಿಸಲಾಗುತ್ತದೆ ಎಂದು ರಾಜಾ ಚನ್ನಪ್ಪ ನಾಯಕ ತಿಳಿಸಿದರು .

ಫೋಟೊ : ಸುರಪುರ ಪತ್ರಿಕಾ ಭವನದಲ್ಲಿ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್‌ನವರು ಧನ್ವಂತರಿ ಜಯಂತಿಯ ಆಮಂತ್ರಣ ಪತ್ರಿಕೆ ಪ್ರದರ್ಶಿಸಿದರು. ರಾಜಾ ಚನ್ನಪ್ಪ ನಾಯಕ, ಮಕ್ತುಮ ಪಟೇಲ್ ವಜ್ಜಲ್ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!