ಒನಕೆ ಓಬವ್ವ ಮಹಿಳಾ ಶಕ್ತಿಯ ಪ್ರತೀಕ;ಹೆಚ್.ಎ.ಸರಕಾವಸ್
ಸುರಪುರ ಟೈಮ್ಸ್ ವಾರ್ತೆ
ಸುರಪುರ : ನೆಲ, ಜಲ, ಜನರ ಹಿತಕ್ಕಾಗಿ ಹೋರಾಡಿದ ವೀರ ವನಿತೆ ಒನಕೆ ಓಬವ್ವ ಮಹಿಳಾ ಶಕ್ತಿಯ ಪ್ರತೀಕವಾಗಿದ್ದಾರೆ ಎಂದು ತಹಸೀಲ್ದಾರ್ ಹೆಚ್.ಎ.ಸರಕಾವಸ್ ಹೇಳಿದರು.
ಇಲ್ಲಿಯ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಮಂಗಳವಾರ ಹಮ್ಮಿಕೊಂಡಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಒನಕೆ ಒಬವ್ವ ಒಬ್ಬ ಕೋಟೆ ಕಾವಲಗಾರನ ಹೆಂಡತಿಯಾಗಿ, ಸಮಯ ಪ್ರಜ್ಞೆ ಮತ್ತು ಧೈರ್ಯದಿಂದ ಶತ್ರುಗಳ ವಿರುದ್ಧ ಹೋರಾಡಿ ಮಹಿಳೆಯರ ಸಾಧನೆಗೆ ಪ್ರೇರಕಳಾಗಿದ್ದಾಳೆ ಎಂದರು.
ಅನ್ನ, ಆಶ್ರಯ ಕೊಟ್ಟ ಧಣಿಗೆ ಸ್ವಾಮಿನಿಷ್ಟೇ ತೋರಿ, ಪತಿಯ ಊಟಕ್ಕೆ ಭಂಗವಾಗಬಾರದೆಂದು ಕಳ್ಳಗಿಂಡಿಯಲ್ಲಿ ಒಳ ನುಸುಳುತ್ತಿದ್ದ ವೈರಿಗಳನ್ನು ಸದೆಬಡಿದು ದಿಟ್ಟ ಹೋರಾಟ ಮಾಡಿದ ಮಹಿಳೆ. ಒನಕೆ ಓಬವ್ವ ತಮ್ಮ ಜೀವನದಲ್ಲಿ ಸ್ವಾಮಿನಿಷ್ಟೇ, ಪತಿ ಭಕ್ತಿ ಮತ್ತು ನಾಡಭಕ್ತಿ ಮೆರೆದಿದ್ದಾರೆ. ಇಂತಹ ವೀರ ವನಿತೆಯ ಸಾಹಸ, ಧೈರ್ಯ ಎಲ್ಲ ಮಹಿಳೆಯರಿಗೆ ದಾರಿ ದೀಪವಾಗಿದೆ ಎಂದರು.
ಸಹಾಯಕ ಖಜಾನಾಧಿಕಾರಿ ಸಣ್ಣಕೆಪ್ಪ ಎಚ್.ಕೊಂಡಿಕಾರ ಉಪನ್ಯಾಸ ನೀಡಿದರು. ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ ಮಾನಪ್ಪ ಕಟ್ಟಿಮನಿ ವಿಶೇಷ ಆಹ್ವಾನಿತರಾಗಿದ್ದರು. ಶಿರಸ್ತೇದಾರ ಗುರುಬಸಪ್ಪ ಪಾಟೀಲ್, ಮಹಿಳಾ ಗ್ರಾಮಲೆಕ್ಕಿಗರು, ಮಹಿಳಾ ಜವಾನರು ಸೇರಿ ಇನ್ನಿತರರಿದ್ದರು. ಎಸ್ಡಿಎ ರವಿ ನಾಯಕ ಬೆನಕನಹಳ್ಳಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

