ನಗರಸಭೆಯಿಂದ ಕನ್ನಡೇತರ ನಾಮಫಲಕ ತೆರವು ಕಾರ್ಯಾಚರಣೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಕನ್ನಡ ಪರ ಸಾಮೂಹಿಕ ಸಂಘಟನೆಗಳ ಒಕ್ಕೂಟದ ಒತ್ತಾಯದ ಮೇರೆಗೆ ನಗರಸಭೆಯು ನಗರದಲ್ಲಿ ಕನ್ನಡೇತರ ನಾಮಫಲಕಗಳನ್ನು ಅಳವಡಿಸಿರುವ ಮಳಿಗೆಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದೆ.
ಗುರುವಾರ ನಗರದ ಗಾಂಧಿ ಚೌಕ್ ರಸ್ತೆಯಲ್ಲಿ ಮಳಿಗೆಗಳ ಮೇಲೆ ಅಳವಡಿಸಿದ್ದ ಆಂಗ್ಲ ಹಾಗೂ ಇತರೆ ಭಾಷೆಯ ನಾಮಫಲಕಗಳನ್ನು ನಗರಸಭೆಯ ಸಿಬ್ಬಂದಿ ತೆರವುಗೊಳಿಸಿದರು. ಕೆಲವರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಆದರೆ, ಅದನ್ನು ಲೆಕ್ಕಿಸದೆ ಕಾರ್ಯಾಚರಣೆ ಕೈಗೊಂಡರರು.
ಮಳಿಗೆಗಳ ಮೇಲೆ ಕನ್ನಡ ನಾಮಫಲಕಗಳನ್ನು ಅಳವಡಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ನಗರಸಭೆಯಿಂದ ಮಳಿಗೆಗಳ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು. ನೋಟಿಸ್ ನೀಡಿದರೂ ನಾಮಫಲಕಗಳ ಮೇಲೆ ಕನ್ನಡದಲ್ಲಿ ಬರೆಸದ ಕಾರಣ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ನಗರಸಭೆಯ ಅಧಿಕಾರಿಗಳು ಸಿಬ್ಬಂದಿ ತಿಳಿಸಿದ್ದಾರೆ.
ಸುರಪುರ ನಗರ ಪ್ರದೇಶಗಳಲ್ಲಿನ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಇಲ್ಲದಿದ್ದರೆ ಅವುಗಳನ್ನು ತೆರವುಗೊಳಿಸುವ ಕೆಲಸವನ್ನು ನಗರ ಸಭೆ ಆಡಳಿತ ಮಾಡುತ್ತಿರುವುದು ಒಳ್ಳೆಯ ವಿಚಾರ. ಇಲ್ಲದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರೆ ಆ ಕೆಲಸ ಮಾಡಬೇಕಾಗುತ್ತದೆ ಎಂದು ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಭೈರಿಮರಡ್ಡಿ ಎಚ್ಚರಿಸಿದ್ದಾರೆ.





