ರೈತರಿಗೆ ಅಳತೆ ಮೀರಿದ ಮೋಸ; ಭತ್ತ ತೂಕದಲ್ಲಿ ಗೋಲ್ ಮಾಲ್; ವಂಚನೆ ಬಯಲಿಗೆಳೆದ ಬೋನ್ಹಾಳ ಗ್ರಾಮದ ರೈತರು!
ಸುರಪುರ ಟೈಮ್ಸ್ ವಾರ್ತೆ
ಸುರಪುರ: ವ್ಯಾಪಾರಿಗಳು ತೂಕ ಮತ್ತು ಅಳತೆಯಲ್ಲಿ ಮೋಸ ಮಾಡುವುದು ಇಂದು ನೆನ್ನೆಯದ್ದಲ್ಲ. ಇದೇ ಕಾರಣಕ್ಕೆ ‘ವ್ಯಾಪಾರಂ ದ್ರೋಹ ಚಿಂತನಂ’ ಎಂಬ ಗಾದೆ ಮಾತನ್ನು ಎಷ್ಟು ಉಜ್ಜಿದರೂ ಕ್ಲೀಷೆ ಅಂತ ಅನ್ನಿಸುವುದಿಲ್ಲ. ಡಿಜಿಟಲ್ ತಕ್ಕಡಿಗಳು ಬಂದ ನಂತರ ಸ್ವಲ್ಪ ಮಟ್ಟಿಗೆ ಮೋಸ ಕಡಿಮೆಯಾಗಿದೆಯಾದರೂ; ತಾಲೂಕಿನಲ್ಲಿ ಬಹಳಷ್ಟು ಕಡೆಗಳಲ್ಲಿ ಇಂದಿಗೂ ಸಾಂಪ್ರದಾಯಿಕ ತಕ್ಕಡಿಗಳ ಬಳಕೆ ಹೆಚ್ಚಾಗಿದ್ದು, ಮೋಸವೂ ಮುಂದುವರಿದಿದೆ.ವರ್ಷವಿಡೀ ಬೆವರು ಸುರಿಸಿ ಬೆಳೆದ ಬೆಳೆ ಮಾರಾಟ ಮಾಡುವಾಗ ತೂಕದಲ್ಲಿ ಮೋಸ ಆಗುತ್ತಿರುವುದು ಬಯಲಾಗಿರುವ ಪರಿಣಾಮ ಭತ್ತ ಬೆಳೆದ ಅನ್ನದಾತರಿಗೆ ದಿಗಿಲು ಬಡಿದಂತಾಗಿದೆ.
ತೂಕದಲ್ಲಿ ಅನ್ಯಾಯ ಮಾಡುತ್ತಿರುವುದನ್ನು ಸುರಪುರ ತಾಲೂಕಿನ ಬೋನ್ಹಾಳ ಗ್ರಾಮದ ರೈತರು ಬಯಲು ಮಾಡಿದ್ದಾರೆ. ಇದನ್ನು ನೋಡಿ ಅವರು ಕಂಗಾಲು ಆಗಿರುವುದು ಮಾತ್ರವಲ್ಲದೇ ಶಾಕ್ ಆಗಿದ್ದಾರೆ. ಇದಕ್ಕೆ ಲಗಾಮು ಹಾಕಬೇಕು ಎನ್ನುವುದು ರೈತರ ಆಗ್ರಹವಾಗಿದೆ.
ತೂಕ-ಬೆಲೆ ಎರಡೂ ಕಡಿಮೆ
ಬೋನ್ಹಾಳ ಗ್ರಾಮದ ರೈತರು ಭತ್ತ ತೆಗೆದು ಕೊಳ್ಳಲು ಮಂಜಲಾಪುರ ಗ್ರಾಮದ ಬೀರಮಲ್ಲಪ್ಪ ಎನ್ನುವ ವ್ಯಕ್ತಿಗೆ ಬತ್ತವನ್ನು ಮಾರಾಟ ಮಾಡಿದ್ದಾರೆ. ಈಗಾಗಲೇ ಸುಮಾರು 50ರಿಂದ 60 ಜನ ರೈತರು ತಾವು ಬೆಳೆದಿರುವ ಭತ್ತವನ್ನು ತಮ್ಮ ಏಜೆಂಟ್ರ ಮೂಲಕ ಭತ್ತವನ್ನು ಖರೀದಿ ಮಾಡಿ ಪ್ರತಿಯೊಂದು ಚೀಲಕ್ಕೆ ಸುಮಾರು ಏಳರಿಂದ ಎಂಟು ಕೆಜಿ ವ್ಯತ್ಯಾಸ ಕಂಡು ಬಂದಿರುವುದರಿಂದ ಅನುಮಾನ ಬಂದಿದೆ. ಇದಲ್ಲದೇ ದರ ಕೂಡ ಕಡಿಮೆ ಮಾಡಿರುವ ಪರಿಣಾಮ ಅನ್ನದಾತನಿಗೆ ಅನುಮಾನ ಬಂದಿದೆ.
ದಾಳಿಯೇ ನಡೆದಿಲ್ಲ
ರೈತರಿಂದ ಧಾನ್ಯ ಖರೀದಿಸುವಾಗ ತೂಕದಲ್ಲಿನ ಮೋಸದ ಬಗ್ಗೆ ಯಾವ ಕ್ರಮವೂ ಆಗುತ್ತಿಲ್ಲ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ತೂಕದಲ್ಲಿ ಮೋಸ ನಡೆಯುತ್ತದೆಲೇ ಇದೆ. ಮಾರಾಟಕ್ಕೆ ಸೂಕ್ತ ಮಾರುಕಟ್ಟೆಯೂ ಇಲ್ಲ. ಸೂಕ್ತ ತೂಕದ ವ್ಯವಸ್ಥೆಯೂ ಇಲ್ಲ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ದಾಳಿ ನಡೆಸಿಲ್ಲ. ಸರ್ಕಾರವೂ ಪರಿಹಾರ ಕಂಡುಕೊಂಡಿಲ್ಲ. ಎಂದು ರೈತ ಸಿದ್ದನಗೌಡ ಬೆಳ್ಳಿ ಹೇಳಿದರು.
ಈಗಾಗಲೇ ನಮ್ಮ ಊರಿನಿಂದ ಸುಮಾರು 15ರಿಂದ 16 ಗಾಡಿ ಲೋಡ್ ಗಳನ್ನು ಮಾಡಿಕೊಂಡು ಭತ್ತವನ್ನು ಖರೀದಿ ಮಾಡಿದ್ದಾನೆ ನಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಇಲ್ಲವಾದರೆ ನಾವು ಇದರ ಬಗ್ಗೆ ಪ್ರತಿಭಟನೆ ಮಾಡಲಾಗುವುದೆಂದು ಬೋನ್ಹಾಳ ಗ್ರಾಮದ ರೈತರು ಎಚ್ಚರಿಸಿದ್ದಾರೆ.









