ಸತತ ಅಧ್ಯಯನ, ಪರಿಶ್ರಮದಿಂದ ವಿದ್ಯಾರ್ಥಿಗಳಿಗೆ ಯಶಸ್ಸು ಖಚಿತ;ಎನ್ ಎಸ್ ಕುಲಕರ್ಣಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ;ವಿದ್ಯಾರ್ಥಿಗಳು ಸತತ ಪರಿಶ್ರಮ, ಶ್ರದ್ಧೆ ಮತ್ತು ನಿಷ್ಠೆಯಿಂದ ಅಧ್ಯಯನ ಶೀಲರಾದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಹಾಗೆಯೇ ಹತ್ತನೆ ತರಗತಿ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆಯ ಮೆಟ್ಟಿಲು ಇದ್ದಂತೆ ಶ್ರಮ ಪಟ್ಟು ಓದಿದಾಗ ಮಾತ್ರ ಸಫಲತೆಯ ಗುರಿ ತಲುಪಲು ಸಾಧ್ಯ ಎಂದು ನಿವೃತ್ತ ಉಪನ್ಯಾಸಕ ಎನ್. ಎಸ್. ಕುಲಕರ್ಣಿ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಹತ್ತನೆ ತರಗತಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತುಂಗದ ಸಾಧನೆ ಮಾಡಬೇಕಾದರೆ ಹತ್ತನೆ ತರಗತಿ ಭದ್ರ ಬುನಾದಿ. ಇಲ್ಲಿ ಕಲಿತ ಅನೇಕ ಪಾಠಗಳು ವಿದ್ಯಾರ್ಥಿಯ ಮುಂದಿನ ಶೈಕ್ಷಣಿಕ ಜೀವನದ ಸಾಧನೆಗೆ ದಾರಿ ದೀಪವಾಗುತ್ತವೆ ಎಂದು ಹೇಳಿದರು. ನಂತರ ಶಾಲಾ ವಿದ್ಯಾರ್ಥಿನಿಯರು ನಡೆಸಿಕೊಟ್ಟ ಮನಮೋಹಕ ನಾಟಕ, ನೃತ್ಯ, ಏಕಪಾತ್ರ ಅಭಿನಯ, ಹಾಡು, ಸಂಗೀತ ನೆರೆದಿದ್ದ ಜನತೆಯನ್ನು ಮಂತ್ರ ಮುಗ್ಧರನ್ನಾಗಿಸಿತು.
ಮುಖ್ಯಗುರು ಎಮ್. ಬಿ. ಪಾಟೀಲ, ನಾಗರತ್ನಾ ಕುಲಕರ್ಣಿ, ಸಿಆರ್ಪಿ ಬಂದೇನವಾಜ ನಾಲತವಾಡ, ಸುಭಾಸ, ಗುರುರಾಜ ಕುಲಕರ್ಣಿ, ಮಹಾಲಕ್ಷ್ಮಿ, ಹೀರಾತಾಯಿ, ಸಾವಿತ್ರಿ, ಶಾಂತಮ್ಮ ಇದ್ದರು. ಯಮುನೇಶ ಯಾಳಗಿ ನಿರೂಪಿಸಿ ವಂದಿಸಿದರು.

