ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ “ಗರುಡಾದ್ರಿ ಕಲೆ” ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ;ಕಿರಣ ಕುಮಾರ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಜಗತ್ಪ ಪ್ರಸಿದ್ಧಿ ಕಲೆಯಾಗಿರುವ ಗರುಡಾದ್ರಿ ಚಿತ್ರಕಲೆ ಸುರಪುರ ಸಂಸ್ಥಾನದ ಚಿತ್ರಕಲೆಯಾಗಿದ್ದು ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಾಗಿದೆ ಎಂದು ಭಾರತ ಸರಕಾರ ಜವಳಿ ಸಚಿವಾಲಯ ಧಾರವಾಡದ ಕರಕುಶಲ ವಸ್ತು ಮಂತ್ರಾಲಯದ ಸಹಾಯಕ ನಿರ್ದೇಶಕ ಕಿರಣ ಕುಮಾರ ಹೇಳಿದರು.
ಸಮೀಪದ ಹಸನಾಪುರದ ವೀರಪ್ಪ ನಿಷ್ಠಿ ಎಂಜನಿಯರಿಂಗ್ ಕಾಲೇಜಿನಲ್ಲಿ ಭಾರತ ಸರಕಾರ ಜವಳಿ ಸಚಿವಾಲಯ ಧಾರವಾಡದ ಕರಕುಶಲ ಸೇವಾ ಕೇಂದ್ರ ಅಭಿವೃದ್ಧಿ ಆಯುಕ್ತರ ಕಚೇರಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸುರಪುರ ಚಿತ್ರಕಲೆಯ ಕರಕುಶಲ ಅಧ್ಯಯನ ವರದಿಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಪ್ರತಿಷ್ಠಿತ ಸಂಸ್ಥಾನಗಳಿಂದ 19 ಚಿತ್ರಕಲೆಗಳನ್ನು ದೆಹಲಿಯ ಕರ ಕುಶಲ ಮಂಡಳಿಯ ಆಯ್ಕೆ ಸಮಿತಿಗೆ ಕಳುಹಿಸಲಾಗಿತ್ತು. ಆಯ್ಕೆ ಸಮಿತಿಯಲ್ಲಿ ಸುರಪುರ ಚಿತ್ರಕಲೆ ಆಯ್ಕೆಯಾಗಿದೆ. ಇದು ಅತ್ಯಂತ ಸಂತಸ, ಹೆಮ್ಮೆಯ ವಿಷಯ. ಅಂತಾರಾಷ್ಟ್ರಯ ಮಟ್ಟದಲ್ಲಿ ಸುರಪುರದ ಘನತೆ, ಗೌರವ ಇನ್ನಷ್ಟು ಹೆಚ್ಚಾಗಿದೆ. ಇದು ಸುರಪುರ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜನರು ಹೆಮ್ಮೆಪಡುವ ವಿಷಯವಾಗಿದೆ ಎಂದು ತಿಳಿಸಿದರು.
ಕಲಾವಿದ ರಹೇಮನ್ ಪಟೇಲ್ ಮಾತನಾಡಿ, ಸುರಪುರ ಚಿತ್ರ ಕಲೆ ಸುಮಾರು 300 ವರ್ಷಕ್ಕಿಂತ ಮೇಲ್ಪಟ್ಟದ್ದಾಗಿದೆ. ಸಂಸ್ಥಾನದ ಅರಸರು ಕಲೆ, ಸಾಹಿತ್ಯ, ಸಂಸ್ಕೃತಿಗೆ ಅಪಾರ ಪ್ರೋತ್ಸಾಹ ನೀಡಿದರು. ಇದು ಅತ್ಯಂತ ಸೂಕ್ಷ್ಮ ಮತ್ತು ಅದ್ಬುತ ಕಲೆಯಾಗಿ ಇತಿಹಾಸದಲ್ಲಿ ಮೈಲುಗಲ್ಲಾಗಿದ್ದು ವಿಶ್ವ ಮಟ್ಟದಲ್ಲಿ ಖ್ಯಾತಿಗಳಿಸಿದೆ. ದೇಶದ ಸಂಸತ್ ಭವನದಲ್ಲಿಯೂ ಅನಾವರಣಗೊಂಡಿದೆ. ಇಂಗ್ಲೆಂಡನ ಮ್ಯೂಸಿಯಂನಲ್ಲಿಯೂ ಇದೆ. ಅಂತಾರಾಷ್ಟ್ರೀಯ ಕಲಾವಿದ ವಿಜಯ ಹಾಗರಗುಂಡಗಿ ಅವರು ಸಹ ಈ ಚಿತ್ರಕಲೆ ಉಳಿಸಿ ಬೆಳೆಸಲು ಶ್ರಮಿಸಿದ್ದಾರೆ ಎಂದರು.
ಕಲಾವಿದ ಜಗದೀಶ ಕಾಂಬ್ಳೆ, ಅಧ್ಯಕ್ಷತೆ ವಹಿಸಿದ್ದ ವೀರಪ್ಪ ನಿಷ್ಠಿ ಎಂಜನಿಯರಿಂಗ್ ಕಾಲೇಜಿನ ಕಾರ್ಯದರ್ಶಿ ಡಾ.ಶಾಂತಂಲಾ ಶರಣಬಸಪ್ಪ ನಿಷ್ಠಿ ಮಾತನಾಡಿದರು. ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಪುಸ್ತಕ ಬಿಡುಗಡೆ ಗೊಳಿಸಿದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಎಸ್.ನಿಷ್ಠಿ, ಪ್ರಾಂಶುಪಾಲ ಡಾ.ಶರಣಬಸಪ್ಪ ಸಾಲಿ, ಕಲಾವಿದ ಚಂದ್ರಶೇಖರ ಶಿಲ್ಪಿ ವೇದಿಕೆಯಲ್ಲಿದ್ದರು. ಚಿತ್ರಕಲಾವಿದರನ್ನು ಸನ್ಮಾನಿಸಲಾಯಿತು. ಬಳಿಕ ಶರಣಬಸವ ಶಿಕ್ಷಣ ಸಂಸ್ಥೆ ಚಿತ್ರಕಲಾ ವಿಭಾಗವನ್ನು ಸಂಸ್ಥಾನಿಕ ರಾಜಾ ಕೃಷ್ಣಪ್ಪ ನಾಯಕ ಉದ್ಘಾಟಿಸಿದರು. ಶಿವುಕುಮಾರ ಮಸ್ಕಿ ಸ್ವಾಗತಿಸಿದರು. ಪ್ರಕಾಶ ಅಂಗಡಿ ಕನ್ನೆಳ್ಳಿ ನಿರೂಪಿಸಿದರು. ಜಾವೇದ್ ಹವಾಲ್ದಾರ್ ವಂದಿಸಿದರು.





