ನಾಳೆಯಿಂದ ಶ್ರೀ ಇಟಗಿ ಭೀಮಾಂಬಿಕೆ ದೇವಿಯ ಪ್ರವಚನ;ಡಾ.ಚನ್ನಲ್ಲಿಕಾರ್ಜುನ ಶಿವಾಚಾರ್ಯ
ಸುರಪುರ ಟೈಮ್ಸ್ ವಾರ್ತೆ
ಸುರಪುರ;ತಾಲೂಕಿನ ಲಕ್ಷ್ಮೀಪುರ ಗ್ರಾಮದ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಮೌನಯೋಗಿ ಸುಶೀಲ ಗೋವುಗಳ ಜಾತ್ರಾ ಮಹೋತ್ಸವ ಮತ್ತು ಮಠದ ಪೀಠಾಧಿಪತಿಗಳ 6ನೇ ವರ್ಷದ ಗುರು ಪಟ್ಟಾಧಿಕಾರದ ವರ್ಧಂತೋತ್ಸವ ನಿಮಿತ್ತ ಇಟಗಿ ಭೀಮಾಂಬಿಕೆ ದೇವಿಯ ಪ್ರವಚನ ನಾಳೆಯಿಂದ ಪ್ರಾರಂಭಗೊಳ್ಳಲಿದೆ ಎಂದು ಶ್ರೀಗಿರಿ ಸಂಸ್ಥಾನ ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲೂಕಿನ ಲಕ್ಷ್ಮೀಪುರ ಗ್ರಾಮದ ಶ್ರೀಗಿರಿ ಮಠದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮದ ದಾರಿಯಲ್ಲಿ ನಡೆಯಿರಿ, ಶ್ರಮವನ್ನು ಪೂಜೆಯಾಗಿ ಕಾಣಿರಿ, ಮಾನವೀಯತೆಯೇ ಮಹಾದೇವತೆ ಎಂದು ಅರಿಯಿರಿ ಸಾರಿದ ದೇವಿ ಭೀಮಾಂಬಿಕಾ ತಾಯಿಯ ಪುರಾಣ ಪ್ರವಚನ ಜ.12 ರಿಂದ ಜ.20 ರವರೆಗೆ ಪ್ರತಿ ದಿನ ರಾತ್ರಿ 7.30 ಗಂಟೆಯಿಂದ ಆರಂಭವಾಗುತ್ತದೆ.ಪಂಡಿತರತ್ನ ವೇ.ಮೂ. ಶ ಸಿದ್ದರಾಮ ಸ್ವಾಮಿಗಳು ವಿಶ್ವಾರಾಧ್ಯ ನಿವಾಸ ಬ್ಯಾಡಗಿಹಾಳ ಪುರಾಣ ಪ್ರವಚನ ಮಾಡುವರು
ಜ.21 ರಂದು ಬೆಳಗ್ಗೆ ಮೌನಯೋಗಿಸುಶೀಲ ಗೋವುಗಳ ಜಾತ್ರೆ ನಿಮಿತ್ತ ಶ್ರೀನಂದಿ ಬಸವೇಶ್ವರರಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾ ಮಂಗಳಾರುತಿ, ಪುರಂತರ ಸೇವೆ, ಸಂಜೆ ಮಹಾ ರಥೋತ್ಸವ ಇರುತ್ತದೆ. ಐದು ದಿನಗಳ ಪರ್ಯಂತ ಜಾತ್ರೆ ನಡೆಯಲಿದೆ. 23 ರಂದು ಜಾತ್ರೆ ನಿಮಿತ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಜ.23 ರಂದು ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ, ಜ.24 ರಂದು ಉಸುಕಿನ ಚೀಲ ಎತ್ತುವ ಸ್ಪರ್ಧೆ, ಜ.25 ರಂದು ಜೋಡು ಎತ್ತುಗಳಿಂದ ಕಲ್ಲು ಎಳೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವಿಜೇತರಿಗೆ ಬೆಳ್ಳಿ ಮತ್ತು ನಗದು ಬಹುಮಾನ ಕೊಟ್ಟು ಪ್ರೋತ್ಸಾಹಿಸಲಾಗುವುದು. 1986 ರಿಂದ ಇಲ್ಲಿ ಪ್ರತಿ ವರ್ಷ ದನಗಳ ಜಾತ್ರೆ ನಡೆಯುತ್ತಾ ಬಂದಿದೆ ಈ ಪರಂಪರೆಯಿಂದ ಶ್ರೀಗಿರಿ ಮಠ ನಾಡಿಗೆ ಪ್ರಸಿದ್ದಿ ಪಡೆದಿದೆ ಎಂದರು.ದೇವಸ್ಥಾನದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಸಿಸಿ ರಸ್ತೆ ನಿರ್ಮಾಣ, ಬೆಟ್ಟದ ಮೇಲೆ ಕುಡಿಯುವ ನೀರು, ಭಕ್ತರಿಗೆ ನಾಲ್ಕು ಕೋಣೆಗಳ ವ್ಯವಸ್ಥೆ ನಂತರ ಭಕ್ತರ ದೇಣಿಗೆಯಿಂದ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿಯ ಕತೃ ಗದ್ದುಗೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಶರಣು ನಾಯಕ ಬೈರಿಮರಡ್ಡಿ ,ಸೂಗರೇಶ್ವರ ಮಡ್ಡಿ ಸೇರಿದಂತೆ ಮಠದ ಸದ್ಭಕ್ತರು ಉಪಸ್ಥಿತರಿದ್ದರು.







