ಫೆ.8,9, ರಂದು ರಾಜನಹಳ್ಳಿ ಮಹರ್ಷಿ ಶ್ರೀ ವಾಲ್ಮೀಕಿ ಜಾತ್ರೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ಮಹರ್ಷಿ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಾತ್ರೆಯು ಈ ವರ್ಷವೂ ಅದ್ಧೂರಿಯಾಗಿ ಜರುಗಲಿದೆ ಎಂದು ತಾಲೂಕು ಮಹರ್ಷಿ ಶ್ರೀ ವಾಲ್ಮೀಕಿ ನಾಯಕ ಸಂಘದ ಮುಖಂಡರು ತಿಳಿಸಿದರು.
ಇಲ್ಲಿಯ ತಾಲೂಕು ಮಹರ್ಷಿ ಶ್ರೀ ವಾಲ್ಮೀಕಿ ನಾಯಕ ಸಂಘದ ಕಚೇರಿಯಲ್ಲಿ ಶುಕ್ರವಾರ ರಾಜನಹಳ್ಳಿ ಜಾತ್ರಾ ಮಹೋತ್ಸವದ ಭಿತ್ತಿ ಪತ್ರ ಬಿಡುಗಡೆ ಗೊಳಿಸಿ ಮಾತನಾಡಿದ ಅವರು, ಫೆ. 8 ಮತ್ತು 9 ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ ಹಾಗೂ ಶ್ರೀ ಮಠದ 28 ನೇ ವಾರ್ಷಿಕೋತ್ಸವ, ಲಿಂಗೈಕ್ಯ ಜಗದ್ಗುರು ಪುಣ್ಯಾನಂದಪುರಿ ಮಹಾ ಸ್ವಾಮಿಜಿಯವರ ೧೯ ನೇ ವರ್ಷದ ಪುಣ್ಯಾರಾಧನೆ ಹಾಗೂ ಜಗದ್ಗುರು ಡಾ.ವಾಲ್ಮೀಕಿ ಪ್ರಸನ್ನಾನಂದ ಮಹಾ ಸ್ವಾಮೀಜಿಯವರ 18 ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ಆಯೋಜಿಸಲಾಗಿದೆ ಎಂದರು.
ಸುರಪುರ ಮತ್ತು ಹುಣಸಗಿ ತಾಲೂಕಿನಾದ್ಯಂತ ಇರುವ ಸಮಾಜದ ಬಾಂಧವರು ಹಾಗೂ ಸಮಾಜದ ಹಿರಿಯರು, ಯುವಕರು ಹಾಗೂ ಸಮಾಜದ ಮಹಿಳೆಯರು ಈ ಜಾತ್ರೆ ಹಾಗೂ ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ಸ್ವಯಂಪ್ರೇರಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿ ಗೊಳಿಸಬೇಕು ಎಂದು ಕೋರಿದರು.ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕಾ ಕಾರ್ಯದರ್ಶಿ ನಾಗರಾಜ ನಾಯಕ ಪ್ಯಾಪ್ಲಿ ಮತ್ತು ಸಂಜೀವ ವೈ. ನಾಯಕ ಮಾತನಾಡಿದರು. ತಾಲೂಕಾ ಘಟಕದ ಅಧ್ಯಕ್ಷ ಭೀಮನಗೌಡ ಲಕ್ಷ್ಮೀ, ಮಠದ ಪ್ರತಿನಿಧಿ ಶರಣು ಮಕಾಶಿ, ತಾಲೂಕಾ ಘಟಕದ ಉಪಾಧ್ಯಕ್ಷ ಭೀಮು ಹೆಚ್.ನಾಯಕ ಮಲ್ಲಿಭಾವಿ, ಖಜಾಂಚಿ ವಿಜಯಕುಮಾರ ಚಿಟ್ಟಿ, ಸಂಘಟನಾ ಕಾರ್ಯದರ್ಶಿ ರಂಗನಾಥ ನಾಯಕ ಲಕ್ಷ್ಮೀಪುರ ದತ್ತು ನಾಯಕ ಗುತ್ತೇದಾರ, ವೆಂಕಟೇಶ ಗುಡ್ಡಕಾಯಿ, ದುರಗಪ್ಪ ಡೊಣ್ಣಿಗೇರಿ, ಮೌನೇಶ ಶಖಾಪೂರ ಸೇರಿ ಇತರರಿದ್ದರು.

