ಮಾ.31ಕ್ಕೆ ಮಹಾವೀರ ಜಯಂತಿ: ತಾಲೂಕಿನಲ್ಲಿ ಕಡ್ಡಾಯ ಆಚರಣೆ;H.A.ಸರಕಾವಸ್
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಮಾರ್ಚ್ 31ರಂದು ಭಗವಾನ್ ಮಹಾವೀರ ಜಯಂತಿಯನ್ನು ತಾಲೂಕಿನಲ್ಲಿ ಶ್ರದ್ಧಾ-ಭಕ್ತಿಯಿಂದ ಆಚರಿಸಲು ತಾಲೂಕು ಆಡಳಿತ ನಿರ್ಧರಿಸಿದೆ ಎಂದು ತಹಸೀಲ್ದಾರ್ ಎಚ್.ಎ. ಸರಕಾವಸ್ ತಿಳಿಸಿದ್ದಾರೆ.
ನಗರದ ಪ್ರಜಾಸೌಧದಲ್ಲಿರುವ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಆರೋಗ್ಯ ಕೇಂದ್ರಗಳು, ಗ್ರಾಮ ಪಂಚಾಯಿತಿಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸಲು ಸೂಚಿಸಿದರು. ತಾಲೂಕು ಆಡಳಿತದ ವತಿಯಿಂದ ಅಂದು ಬೆಳಗ್ಗೆ 10 ಗಂಟೆಗೆ ತಹಸೀಲ್ದಾರ್ ಕಚೇರಿಯಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಭಗವಾನ್ ಮಹಾವೀರರ ಜೀವನ, ತತ್ವಗಳು ಮತ್ತು ಅವರ ಸಂದೇಶಗಳ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಮಹಾವೀರರು ಜೈನ ಧರ್ಮದ 24ನೇ ತೀರ್ಥಂಕರರಾಗಿದ್ದು, ಅಹಿಂಸಾ, ಸತ್ಯ ಮತ್ತು ಶಾಂತಿಯ ಸಂದೇಶವನ್ನು ಸಾರಿದ ಮಹಾನ್ ತತ್ವಜ್ಞರಾಗಿದ್ದಾರೆ.ಆದ್ದರಿಂದ ಈ ದಿನವನ್ನು ಜೈನ್ ಸಮುದಾಯದಲ್ಲಿ ಅತ್ಯಂತ ಮಹತ್ವದ ಹಬ್ಬವಾಗಿ ಆಚರಿಸಲಾಗುತ್ತದೆ.
ತಾಲೂಕು ಆಡಳಿತ ಆಯೋಜಿಸುವ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸೂಚನೆ ನೀಡಲಾಗಿದೆ. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜೈನ್ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಮಾ.28ಕ್ಕೆ ಅಗ್ನಿ ಬನ್ನಿರಾಯ ಜಯಂತಿ
ಇದೇ ವೇಳೆ, ತಾಲೂಕು ಆಡಳಿತದ ವತಿಯಿಂದ ಮಾರ್ಚ್ 28ರಂದು ಅಗ್ನಿ ಬನ್ನಿರಾಯ ಜಯಂತಿಯನ್ನೂ ಆಚರಿಸಲಾಗುವುದು. ಆ ದಿನವೂ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸಲು ತಹಸೀಲ್ದಾರ್ ಸೂಚಿಸಿದರು.

