ಏ.10 ರವರೆಗೆ ನಿರಂತರವಾಗಿ ನೀರು ಹರಿಸಲು ಸಿಎಂಗೆ ಶಾಸಕ ಆರ್ವಿಎನ್ ಮನವಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ನಾರಾಯಣಪುರ ಎಡದಂಡೆ ಕಾಲುವೆಯ ಜಾಲಗಳಿಗೆ ಏ.10 ರವರೆಗೆ ನಿರಂತರವಾಗಿ ನೀರು ಹರಿಸುವಂತೆ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಬೆಂಗಳೂರಿನಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ನಂತರ ಮಾತನಾಡಿದ ಅವರು, ನಾರಾಯಣಪುರ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿಯ ರೈತರ ಬೆಳೆಗಳು ಒಣಗುವ ಸ್ಥಿತಿಯಲ್ಲಿದ್ದು ಇನ್ನು ಕೆಲವು ದಿನಗಳ ಕಾಲ ಕಾಲುವೆಗೆ ನೀರು ಹರಿಸದೆ ಹೋದರೆ ಬೆಳೆಗಳು ಸಂಪೂರ್ಣವಾಗಿ ಹಾಳಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗಾಗಿ ರೈತರ ಹಿತ ಕಾಪಾಡುವ ದೃಷ್ಟಿಯಿಂದ ಮಹಾರಾಷ್ಟçದ ಕೊಯ್ನಾ ಡ್ಯಾಂನಿಂದ ನಾರಾಯಣಪುರ ಜಲಾಶಯಕ್ಕೆ ನೀರು ಹರಿಸಿಕೊಂಡು, ನಾರಾಯಣಪುರ ಎಡದಂಡೆ ಕಾಲುವೆಯ ಜಾಲಗಳಿಗೆ ಏ.10 ರವರೆಗೆ ನಿರಂತರವಾಗಿ ನೀರು ಹರಿಸಲು ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.
ನಮ್ಮ ಸರಕಾರ ಯಾವತ್ತು ರೈತರ ಪರವಾಗಿದೆ. ಜಲಾಶಯಗಳಲ್ಲಿನ ನೀರಿನ ಲಭ್ಯತೆಯನ್ನು ತಿಳಿದುಕೊಂಡು ಕುಡಿಯುವ ನೀರಿಗೆ ಆದ್ಯತೆ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಉಳಿದ ನೀರಿನ ಲಭ್ಯತೆಯನ್ನು ನೋಡಿಕೊಂಡು ಮುಂದೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರಿಗೆ ಭರವಸೆ ನೀಡಿದರು.
ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಗೌಡ ಪಾಟೀಲ್ ವಜ್ಜಲ್, ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ, ಮುಖಂಡರಾದ ವೆಂಕೋಬ ಯಾದವ ಮಂಗಳೂರು, ಗುಂಡಪ್ಪ ಸೊಲ್ಲಾಪುರ, ಎ.ಜಿ.ಕುಂಬಾರ, ಭೀಮರಾಯ ಮೂಲಿಮನಿ, ತಿಮ್ಮಣ್ಣ ಮಿಂಚೇರಿ, ಶಾಂತಪ್ಪ ಬಾಕ್ಲಿ, ಶರಣು ಮುಧೋಳ, ಸಿದ್ದನಗೌಡ ಹಂದ್ರಾಳ, ಕೃಷ್ಣಾ ಜಾದವ, ಶಾಸಕರ ಆಪ್ತ ಸಹಾಯಕ ಹಣಮಂತ್ರಾಯ ಮಕಾಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
